ಗೆಜ್ಜೆ ಕಟ್ಟಲು ಯಕ್ಷಗಾನ ಮೇಳಗಳ ಸಿದ್ಧತೆ
ಲೇಖಕರು : ಆತ್ಮಭೂಷಣ್
ಮ೦ಗಳವಾರ, ನವ೦ಬರ್ 12 , 2013
|
ಯಕ್ಷಗಾನಕ್ಕೆ ಪ್ರೇಕ್ಷಕರ ಕೊರತೆಯ ಕೂಗು ಕೇಳಿಬರುತ್ತಿರುವ ಈ ದಿನಗಳಲ್ಲಿ ಕರಾವಳಿಯಲ್ಲಿ 45ಕ್ಕೂ ಅಧಿಕ ಯಕ್ಷಗಾನ ಮೇಳಗಳು ಮುಂದಿನ 6 ತಿಂಗಳ ತಿರುಗಾಟಕ್ಕೆ ಸಿದ್ಧತೆ ನಡೆಸಿವೆ. ತೆಂಕು ಹಾಗೂ ಬಡಗು ಎರಡು ತಿಟ್ಟಿನ ಮೇಳಗಳು ನವೆಂಬರ್ನಲ್ಲಿ ಗೆಜ್ಜೆ ಕಟ್ಟಿ ತಿರುಗಾಟ ನಡೆಸಲಿವೆ.
ದ.ಕ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಇಡೀ ರಾತ್ರಿ ಯಕ್ಷಗಾನ ಪ್ರದರ್ಶನ ನೀಡುವುದು ಕರಾವಳಿಯಲ್ಲಿ ನಡೆದುಕೊಂಡು ಬಂದ ಸಂಪ್ರದಾಯ. ಟೆಂಟ್ ಮೇಳ ಟಿಕೆಟ್ ಇಟ್ಟು ಪ್ರದರ್ಶನಗೊಂಡರೆ, ಬಯಲಾಟ ಮೇಳ ಹರಕೆ ರೂಪದಲ್ಲಿ ಪ್ರದರ್ಶನ ನೀಡುತ್ತದೆ. ಇದರ ಜತೆಗೆ ಕೆಲವು ಮೇಳಗಳು ಕಾಲಮಿತಿಯ (ಸಂಜೆಯಿಂದ ಮಧ್ಯರಾತ್ರಿವರೆಗೆ) ಪ್ರದರ್ಶನ ನೀಡುತ್ತವೆ.
ತೆಂಕಿನಲ್ಲಿ ಟೆಂಟ್ ಮೇಳ ಇಲ್ಲ: ತೆಂಕಿನಲ್ಲಿ ಈ ಸಲವೂ ಟೆಂಟ್ ಮೇಳ ಇಲ್ಲ, ಎಲ್ಲವೂ ಬಯಲಾಟ ಮೇಳಗಳೇ. ಬಡಗಿನಲ್ಲಿ ಸಾಲಿಗ್ರಾಮ ಮತ್ತು ಪೆರ್ಡೂರು ಮಾತ್ರ ಟೆಂಟ್ ಮೇಳ. ಈ ಮೇಳಗಳು ಸಾಮಾಜಿಕ ಕಥಾನಕ ಪ್ರದರ್ಶಿಸುತ್ತವೆ. ಯಕ್ಷಗಾನ ಕ್ಷೇತ್ರದಲ್ಲಿ ಕಾಲಮಿತಿ ಯಕ್ಷಗಾನ ಪ್ರಸ್ತಾಪದ ಮಧ್ಯೆಯೇ ತೆಂಕಿನಲ್ಲಿ ಕಟೀಲು ಮೇಳ ತನ್ನ ಸಂಖ್ಯೆಯನ್ನು 6ಕ್ಕೆ ವೃದ್ಧಿಸಿಕೊಂಡಿರುವುದು ವಿಶೇಷ. ಬಡಗಿನಲ್ಲಿ ಮಂದಾರ್ತಿ-5 ಮೇಳ, ಶ್ರೀಕ್ಷೇತ್ರ ಮಾರಣಕಟ್ಟೆ-2 ಮೇಳ ಬಯಲಾಟಕ್ಕೆ ಮೀಸಲು. ಈ ವರ್ಷವೂ ತುಳು ಯಕ್ಷಗಾನ ಮೇಳ ಇಲ್ಲ. ಆದರೆ ಸರಪಾಡಿ ಅಶೋಕ್ ಶೆಟ್ಟಿ ನೇತೃತ್ವದಲ್ಲಿ ಶರಭೇಶ್ವರ ಮೇಳ ಕಾಲಮಿತಿಯಲ್ಲಿ ತುಳು ಪ್ರಸಂಗ ಪ್ರದರ್ಶಿಸಲಿದೆ. ಅಲ್ಲದೆ ಹಿರಿಯಡಕ ಮೇಳ ತೆಂಕು-ಬಡಗು ಪ್ರದರ್ಶನವನ್ನು ಒಂದೇ ರಾತ್ರಿ ನೀಡಲಿದೆ.
|
ಕಟೀಲು ಮೇಳದ ಪ್ರಥಮ ಸೇವೆಯಾಟ
|
'ಕಳೆದ ಬಾರಿಯೂ ಈ ಪ್ರಯೋಗ ಮಾಡಿ ಯಶಸ್ಸಾಗಿದೆ. 15ಕ್ಕೂ ಅಧಿಕ ಕಡೆಗಳಲ್ಲಿ ತುಳು ಪ್ರಸಂಗ ಪ್ರದರ್ಶಿಸಿದ್ದೇವೆ. ಈ ಬಾರಿಯೂ ಬೇಡಿಕೆ ಇರುವಲ್ಲಿ ತುಳು ಪ್ರಸಂಗ ಪ್ರದರ್ಶಿಸುತ್ತೇವೆ' ಎನ್ನುತ್ತಾರೆ ಮೇಳ ವ್ಯವಸ್ಥಾಪಕ ಪಳ್ಳಿ ಕಿಶನ್ ಹೆಗ್ಡೆ.
ಪತ್ತನಾಜೆಗೂ ಮುನ್ನ ಶುರು: ಹರಕೆ ಬಯಲಾಟ ಆಡಿಸುವವರ ಸಂಖ್ಯೆ ಹೆಚ್ಚಾದಂತೆ ಯಕ್ಷಗಾನ ಮೇಳ ತಿರುಗಾಟಕ್ಕೆ ಹೊರಡುವ ವೇಳಾಪಟ್ಟಿಯಲ್ಲೂ ಬದಲಾವಣೆ ಅನಿವಾರ್ಯವಾಗಿದೆ.
ಸಾಮಾನ್ಯವಾಗಿ ಲಕ್ಷದೀಪೋತ್ಸವಕ್ಕೆ ಮೇಳಗಳು ಗೆಜ್ಜೆ ಕಟ್ಟಿದರೆ ಪತ್ತನಾಜೆಗೆ ಗೆಜ್ಜೆ ಬಿಚ್ಚುವುದು ವಾಡಿಕೆ.
ಕಳೆದ 3 ವರ್ಷ ಹಿಂದೆ ಧರ್ಮಸ್ಥಳ ಮೇಳ ಲಕ್ಷದೀಪೋತ್ಸವಕ್ಕೂ ಮೊದಲೇ ತಿರುಗಾಟ ಪ್ರಾರಂಭಿಸಿತು. ಈ ಬಾರಿ ಎಲ್ಲರಿಗಿಂತ ಮುಂಚೆ ಕಟೀಲು ಮೇಳ ನ.8ರಂದೇ ಹೊರಡಲಿದೆ.
ಧರ್ಮಸ್ಥಳ, ಹೊಸನಗರ, ಸಾಲಿಗ್ರಾಮ, ಪೆರ್ಡೂರು, ಮಂದಾರ್ತಿ ಮುಂತಾದ ಪ್ರಮುಖ ಮೇಳಗಳು ನ.10ರ ನಂತರ ಕ್ಷೇತ್ರದಲ್ಲಿ ಸೇವೆಯಾಟ ಪ್ರದರ್ಶಿಸಿ ತಿರುಗಾಟಕ್ಕೆ ಹೊರಡಲಿದೆ. ಈ ಬಾರಿ ಸಾಲಿಗ್ರಾಮ ಮೇಳದಲ್ಲಿ ಬಳ್ಕೂರು ಕೃಷ್ಣ ಯಾಜಿ ಅತಿಥಿ ಕಲಾವಿದರಾಗಿ ಭಾಗವಹಿಸಲಿದ್ದಾರೆ. ಉಳಿದಂತೆ ಬೇರೆ ಮೇಳಗಳಲ್ಲಿ ಕಲಾವಿದರ ಸಣ್ಣಪುಟ್ಟ ಬದಲಾವಣೆ ಇದೆ ಅಷ್ಟೆ.
ಬೇಡಿಕೆ ಬಂದಲ್ಲಿ ಕಾಲಮಿತಿ: ಧರ್ಮಸ್ಥಳದಲ್ಲಿ ನಡೆದ ಕಾಲಮಿತಿ ಯಕ್ಷಗಾನ ಚಿಂತನಾ ಸಭೆಯ ಬಳಿಕ ಕಾಲಮಿತಿ ಯಕ್ಷಗಾನ ಬೇಕು, ಬೇಡ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಆದರೂ ಸೇವೆ ಆಟ ಆಡಿಸುವ ಭಕ್ತರು ಕಾಲಮಿತಿಯನ್ನು ಒಪ್ಪಲು ತಯಾರಿಲ್ಲ.
ಪ್ರಸ್ತುತ ತೆಂಕಿನಲ್ಲಿ ಹೊಸನಗರ ಮೇಳ ಕಾಲಮಿತಿ ಯಕ್ಷಗಾನ ಪ್ರದರ್ಶಿಸುತ್ತಿದೆ. ಬಡಗಿನಲ್ಲಿ ಇಡಗುಂಜಿ ಮೇಳ ಮೊದಲು ಕಾಲಮಿತಿ ಪ್ರಯೋಗ ಜಾರಿಗೆ ತಂದಿತ್ತು. ಈಗ ಮಂದಾರ್ತಿ ಮೇಳ ಕಾಲಮಿತಿ ಪ್ರಸ್ತಾಪ ಮಾಡಿದ್ದು, ಭಕ್ತರು ಕೋರಿದರೆ ಕಾಲಮಿತಿ ಪ್ರದರ್ಶನಕ್ಕೆ ಸಿದ್ಧ ಎಂದಿದೆ. ತೆಂಕಿನಲ್ಲಿ ಧರ್ಮಸ್ಥಳ ಮೇಳ ಈ ವರ್ಷ ಕಾಲಮಿತಿ ಪ್ರದರ್ಶಿಸುವುದಿಲ್ಲ.
ಆದರೆ ಕಟೀಲು ಮೇಳ ಮುಂದಿನ ಜೂನ್ನಿಂದ ಕ್ಷೇತ್ರದಲ್ಲೇ ಪ್ರತಿದಿನ ಸಂಜೆ 6ರಿಂದ ರಾತ್ರಿ 12ರ ವರೆಗೆ ಕಾಲಮಿತಿ ಬಯಲಾಟ ಹಮ್ಮಿಕೊಳ್ಳಲಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ತಿಳಿಸಿದ್ದಾರೆ.
****************
ಕೆಲವು ಮೇಳಗಳ ಕರೆಯೋಲೆಗಳು ಹಾಗೂ ವಿವರಗಳು
ಚಿತ್ರಗಳ ಮೇಲೆ ಕ್ಲಿಕ್ ಮಾಡಿ
ಕೃಪೆ : http://kannadaprabha.com
|
|
|